Thursday, July 7, 2022

ಪ್ರಯಾಣ ಧ್ಯಾನ.

 ಪ್ರಯಾಣ ಧ್ಯಾನ......


ಸಾಮಾನ್ಯವಾಗಿ ಬಹಳಷ್ಟು ಜನ ದಿನನಿತ್ಯ ಉದ್ಯೋಗ ವ್ಯಾಪಾರ ವೃತ್ತಿ ವಿದ್ಯಾಭ್ಯಾಸ ಮಾರಾಟ ಮುಂತಾದ ನಾನಾ ಕಾರಣಗಳಿಗಾಗಿ ಬಸ್ಸು ರೈಲು ಮುಂತಾದ ವಾಹನಗಳಲ್ಲಿ 20/30/50/100 ಕಿಲೋಮೀಟರ್ ದೂರದ ಪ್ರದೇಶಗಳಿಗೆ ಹೋಗಿ ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ. ಅದಕ್ಕೆ ಅವರದೇ ಆದ ಅನಿವಾರ್ಯ ಕಾರಣ ಇರಬಹುದು. ಆದರೆ ಆ ಅನಿವಾರ್ಯ ಸಮಯದಲ್ಲಿ ಒಂದು ಧ್ಯಾನಸ್ಥ ಮನಸ್ಥಿತಿ ಬೆಳೆಸಿಕೊಂಡು ಸಾಧ್ಯವಾದಷ್ಟು ಧ್ಯಾನಸ್ಥ ಸ್ಥಿತಿ ತಲುಪಲು ಪ್ರಯತ್ನಿಸುವ ಒಂದು ವಿಧಾನವೇ ಪ್ರಯಾಣ ಧ್ಯಾನ.


ಈ ಪ್ರಯಾಣಗಳು ಸಹ ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆಯೇ ಇರುತ್ತದೆ. ಇತರೆ ಅಪರೂಪದ ಸಂದರ್ಭಗಳಲ್ಲಿ ಇಡೀ ದಿನ ಇರಬಹುದು. ಆಗ ನಾವು ಬಹುತೇಕರು ನಿದ್ದೆ ಅಥವಾ ಪುಸ್ತಕ ಓದು ಅಥವಾ ಮಾತುಕತೆ ಇದರಲ್ಲಿಯೇ ಸಮಯ ಕಳೆಯುತ್ತೇವೆ. ಇದರ ಜೊತೆಗೆ ಮತ್ತೊಂದು ಪರ್ಯಾಯ ಹವ್ಯಾಸವೇ ಪ್ರಯಾಣ ಧ್ಯಾನ.


ಅಂದರೆ ಪ್ರಯಾಣ ಮಾಡುವಾಗ ಆ ಎಲ್ಲಾ ಶಬ್ದ ಮಾಲಿನ್ಯದ ನಡುವೆಯೂ ಕುಳಿತ ಭಂಗಿಯಲ್ಲಿ ಕಣ್ಣು ಮುಚ್ಚಿ ಧ್ಯಾನ ಮಾಡುವ ಒಂದು ಪ್ರಯತ್ನ.


ಇದು ಹೇಗಿರಬೇಕು.....


ಮೊದಲ ಹಂತದಲ್ಲಿ.....


ಪ್ರಯಾಣದ ನಿಲ್ದಾಣ ಸಮಯವನ್ನು ಖಚಿತಪಡಿಸಿಕೊಂಡು ಗಡಿಯಾರ ಅಥವಾ ಮೊಬೈಲ್‌ ನಲ್ಲಿ ಅದಕ್ಕೆ ಐದು ನಿಮಿಷದ ಮೊದಲಿನ ಸಮಯಕ್ಕೆ ಅಲಾರಾಂ ನಿಗದಿಪಡಿಸಿಕೊಳ್ಳಬೇಕು ಅಥವಾ ಪಕ್ಕದಲ್ಲಿರುವವರಿಗೆ ಆ ಸ್ಥಳ ಬಂದಾಗ ನೆನಪಿಸುವಂತೆ ಮನವಿ ಮಾಡಿಕೊಳ್ಳಬೇಕು. ಪ್ರಾರಂಭದ ದಿನಗಳಲ್ಲಿ ಇದು ಬಹಳ ಮುಖ್ಯ. ನಂತರ ಅದೇ ಅಭ್ಯಾಸವಾಗುತ್ತದೆ. ಅಷ್ಟೂ ಸಮಯ ಕಣ್ಣು ಮುಚ್ಚಿ ಸುಂದರ ಕನಸುಗಳನ್ನು ಕಾಣಬೇಕು. ಅದು ಯಾವುದೇ ವಿಷಯವಾಗಿರಲಿ ನಿಮಗೆ ಸಂತೋಷವನ್ನು ಉಂಟುಮಾಡುವಂತಿರಬೇಕು. ಕೆಲವೊಮ್ಮೆ ಅನೇಕ ಒತ್ತಡಗಳ ಕಾರಣದಿಂದ ಸಂತೋಷದ ದೃಶ್ಯಗಳು ಮನದಲ್ಲಿ ಮೂಡುವುದಿಲ್ಲ. ಆಗ ಹಳೆಯ ಬಾಲ್ಯದ ಸವಿ ನೆನಪುಗಳನ್ನು ಪ್ರಯತ್ನಿಸಬೇಕು. ಅದೂ ಸಾಧ್ಯವಾಗದೆ ದುಃಖದ, ಕಷ್ಟದ, ನೋವಿನ, ಕೆಟ್ಟ ಘಟನೆಗಳು ನೆನಪಾಗಬಹುದು. ಚಿಂತೆ ಬೇಡ. ಅದನ್ನು ಅನುಭವಿಸಿ. ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ. ಕೆಲವು ತಿಂಗಳ ಸತತ ಅಭ್ಯಾಸದ ನಂತರ ಒಳ್ಳೆಯ ಕನಸುಗಳು ಖಂಡಿತ ಮೂಡುತ್ತವೆ. ಇಲ್ಲಿ ನಿರಾಸೆ ಬೇಡ.


ಎರಡನೇ ಹಂತದಲ್ಲಿ.....


ಪ್ರಯಾಣ ಧ್ಯಾನದ ದೊಡ್ಡ ಸವಾಲು ಎರಡನೇ ಹಂತ ದಾಟುವುದು. ಅಂದರೆ ‌ಸಾಮಾನ್ಯವಾಗಿ ಬೆಳಗ್ಗೆ ಮತ್ತು ‌ಸಂಜೆ ಈ ರೀತಿಯ ಪ್ರಯಾಣದಲ್ಲಿ ಸಹಜವಾಗಿ ನಿದ್ದೆ ಆವರಿಸುತ್ತದೆ. ರಾತ್ರಿಯ ಮಂಪರು ಅಥವಾ ದಿನದ ದುಡಿತ ಇದಕ್ಕೆ ಕಾರಣ. ಅದಕ್ಕೂ ಚಿಂತೆ ಬೇಡ. ಆರಾಮವಾಗಿ ನಿದ್ರಿಸಿ. ಧ್ಯಾನಸ್ಥ ಸ್ಥಿತಿಯ ನಿದ್ರೆ ಉತ್ತಮ ಗುಣಮಟ್ಟ ಹೊಂದಿರುತ್ತದೆ. ಇದು ಸಹ ಕೆಲವು ‌ತಿಂಗಳ ಪ್ರಯತ್ನದ ನಂತರ ನಿದ್ರೆ ಕಡಿಮೆಯಾಗುತ್ತದೆ. ಇದನ್ನು ಗೆಲ್ಲಲು ಆಹಾರದಲ್ಲಿ ಒಂದಷ್ಟು ಒಳ್ಳೆಯ ಪಥ್ಯವನ್ನು ಅನುಸರಿಸಬೇಕು. ಜಿಡ್ಡಿಲ್ಲದ ಊಟ, ಹಣ್ಣು ತರಕಾರಿ ಮೊಳಕೆ ಕಾಳುಗಳು ಉತ್ತಮ.


ಮೂರನೆಯ ಹಂತದಲ್ಲಿ....


ಭವಿಷ್ಯದ ಸಾಧನೆ ಅಥವಾ ಸಾಮಾಜಿಕ ಸೇವೆ ಅಥವಾ ಅರಿವಿನ ವಿಶಾಲತೆ ಹೆಚ್ಚಿಸುವ ವಿವಿಧ ಮಾರ್ಗೋಪಾಯಗಳ ಕುರಿತು ಹೆಚ್ಚು ಚಿಂತಿಸಲು ಪ್ರಯತ್ನಿಸಬೇಕು. ಇದು ಸಹ ಉತ್ತಮ ಪರಿಣಾಮ ಬೀರುತ್ತದೆ.


ನಾಲ್ಕನೆಯ ಹಂತದಲ್ಲಿ......


ನಮ್ಮ ನಡವಿನ ಮಾನವೀಯ ಸಂಬಂಧಗಳನ್ನು ಹೆಚ್ಚು ಆಪ್ತವಾಗಿಸಲು ನಮ್ಮ ನೆಲೆಯಲ್ಲಿ ಮಾಡಬಹುದಾದ ಪ್ರಯತ್ನಗಳು ಮತ್ತು ನಮ್ಮ ನಡವಳಿಕೆಗಳಲ್ಲಿ ಮಾಡಿಕೊಳ್ಳಬಹುದಾದ ಸಾಧ್ಯವಿರುವ ಬದಲಾವಣೆಗಳನ್ನು ಕುರಿತು ಧ್ಯಾನಿಸಬೇಕು. ಇದು ನಮ್ಮ ಒಟ್ಟು ಜೀವನಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ.


ಐದನೆಯ ಹಂತದಲ್ಲಿ....


ನಿಧಾನವಾಗಿ ಉಸಿರಾಟದ ಉಚ್ವಾಸ ನಿಶ್ವಾಸಗಳ ಮೇಲೆ ಗಮನ ಕೇಂದ್ರೀಕರಿಸಿ ದೇಹ ಮತ್ತು ಮನಸ್ಸುಗಳ ನಿಯಂತ್ರಣ ಸಾಧಿಸಿ ಧ್ಯಾನದ ಮೂಲ ಆಶಯವನ್ನು ತಲುಪಲು ಪ್ರಯತ್ನಿಸಬೇಕು.


ಜೊತೆಗೆ ಇದಕ್ಕಿಂತ ಉತ್ತಮ ವಿಚಾರಗಳು ಹೊಳೆದರೆ ಅದನ್ನು  ಸಹ ಅಳವಡಿಸಿಕೊಳ್ಳಬಹುದು.


ಈ ಪ್ರಯಾಣ ಧ್ಯಾನದ ನಿರಂತರತೆಯಿಂದ ಸ್ವಕಾರ್ಯ ಮತ್ತು ಸ್ವಾಮಿಕಾರ್ಯ ಎರಡನ್ನೂ ಸಾಧಿಸಬಹುದು. ಇದಕ್ಕಾಗಿ ವಿಶೇಷ ಸಮಯದ ಅವಶ್ಯಕತೆಯೂ ಇಲ್ಲ. ಇದರಿಂದ ನಾವು ಮಾಡುವ ಕೆಲಸದಲ್ಲಿ ಒಂದಷ್ಟು ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ. ಜಗಳ ಕೋಪ ಅಸಹನೆ ತಪ್ಪುಗಳು ಕಡಿಮೆಯಾಗಬಹುದು.


ಸಾಧ್ಯವಿರುವವರು, 

ಅವಕಾಶವಿರುವವರು, 

ಅವಶ್ಯಕತೆ ಇರುವವರು,

ಆಸಕ್ತಿ ಇರುವವರು,

ಪ್ರಯತ್ನಿಸಬಹುದು.


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ